ದೇವರ ಮಕ್ಕಳು

ದೇವರ ಮಕ್ಕಳು

ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಪಾಶ್ಚಾತ್ಯ–ದೇಶಗಳೊಡನೆ ಯುದ್ಧಮಾಡಿದರೂ ಜರ್ಮನಿಯ ಮೇಲೆ `ಆಟಂ–ಬಾಂಬ್’ ಒಗೆಯಲಿಲ್ಲ. ಅದೇ ಜಪಾನದ ಮೇಲೆ ಅಮೇರಿಕೆ ಯುದ್ಧ ಸಾರಿದ ಕೆಲವೇ ದಿನಗಳಲ್ಲಿ ತಾಳ್ಮೆಯಿಲ್ಲದೆ ಎರಡು `ಆಟಂ–ಬಾಂಬ್’ ಹಾಕಿತು. ಇದಕ್ಕೆ ಕಾರಣವೊಂದೇ; ಜಪಾನ್ ಶ್ವೇತಜನಾಂಗಕ್ಕೆ ಸೇರಿದ ದೇಶವಲ್ಲ ಎಂದು ಬಹುಸಂಖ್ಯಾತರು ಇಂದಿಗೂ ನಂಬುತ್ತಾರೆ. ತಮ್ಮ ದೇಶದಲ್ಲಿಯೇ ಸಮಾನತೆ ಪಾಲಿಸದ ಅಮೇರಿಕನ್ನರಿಗೆ ವಿಶ್ವಬಂಧುತ್ವದ ಬಗ್ಗೆ ಪಾಠ ಕಲಿಸಲು ಏನು ಅಧಿಕಾರವಿದೆ? ಎಂದು ಯಾರೇ ಆಗಲಿ ಕೇಳುವ ಪ್ರಶ್ನೆ. ಜಗತ್ತಿನಲ್ಲಿ ದೇಶದೇಶಗಳ ಅಸಮಾನತೆ ಮೈಬಣ್ಣದ ಮೇಲೆ ಅವಲಂಬಿಸಿದೆ ಎಂದು ಅಮೇರಿಕೆಯೂ ಇನ್ನೂ ಇತರ ಎಷ್ಟೋ ದೇಶಗಳೂ ನಂಬಿದಂತಿದೆ. ನಾವು ಬಿಳಿಯರಲ್ಲದ್ದರಿಂದ ಎಷ್ಟು ಕೀಳಾಗಿ ನಮ್ಮನ್ನು ಕಾಣಲಾಗುತ್ತದೆಯೆಂದು ಎಷ್ಟೋ ಭಾರತೀಯರು ಪುಸ್ತಕರೂಪವಾಗಿ ತೋಡಿಕೊಂಡಿದ್ದಾರೆ. ಅಮೇರಿಕೆಯ ನಿಗ್ರೋಸಮಸ್ಯೆ ಜಗತ್ತಿನ ಎಷ್ಟೋ ದೇಶಗಳಿಗೆ ಕಟುವಿಮರ್ಶೆಯ ವಿಷಯವಾಗಿದೆ. ನಗೆಚಾಟಿಕೆಯ ವಿಷಯವೂ ಆಗಿದೆ. ಅವರ ಈ ವರ್ಣದ್ವೇಷಕ್ಕೆ ಅಸೂಯೆ ಕಾರಣವೇ ಅಥವಾ ಅಸಮಾನತೆ ಕಾರಣವೇ ಎಂದು ಕಂಡುಹಿಡಿಯುವ ಕುತೂಹಲವೂ ನನಗಿತ್ತು.

ಅಮೇರಿಕೆಯ ಮೂಲನಿವಾಸಿಗಳಾದ `ರೆಡ್–ಇಂಡಿಯನ್’ ಜನಾಂಗಗಳನ್ನು ಸೋಲಿಸಿ, ಕೆಲವಡೆ ಪೂರ್ಣ ನಾಶಗೊಳಿಸಿ ಬಿಳಿಯರು ಆ ನಾಡನ್ನು ತಮ್ಮದನ್ನಾಗಿ ಮಾಡಿಕೊಂಡರಷ್ಟೆ. ಈ ದೇಶದಲ್ಲಿ ವಿದೇಶೀಯರಾಗಿ ನಿಗ್ರೋ ಜನರು ಹೇಗೆ ಬಂದರೆಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ. ತಮ್ಮ ದೈನಂದಿನ ಕೂಲಿಯ ಕೆಲಸಕ್ಕೆ ಈ ಬಿಳಿಯರಿಗೆ ಆಳುಗಳು ಬೇಕಾದರು. ಹೊಲಗಳಲ್ಲಿ, ತೋಟಗಳಲ್ಲಿ ದುಡಿಯಲಿಕ್ಕೆ, ಅರಣ್ಯವನ್ನು ಕಡಿಮೆ ಮಾಡಲಿಕ್ಕೆ ಜನಬಲ ಬೇಕಾಯಿತು. ಅದಕ್ಕಾಗಿ ಕೈಕೊಂಡ ಅವರ ಉಪಾಯ ಆಫ್ರಿಕದಿಂದ ಗುಲಾಮರನ್ನು ತರುವುದು. ಹದಿನೆಂಟನೇ ಶತಮಾನದ ಕೊನೆ ಮತ್ತು ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಆ ನಿಗ್ರೋ ಗುಲಾಮರ ಆಮದವಾಗಹತ್ತಿತು. ಉತ್ತರ ಅಮೇರಿಕಯ ಶೀತ ಹವೆ ಅವರಿಗೆ ತಡೆಯದ್ದರಿಂದ ದಕ್ಷಿಣಪ್ರಾಂತ (ರಾಜ್ಯ)ಗಳಲ್ಲಿ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ರಫ್ತ್ಮಾಡಲಾಗುತ್ತಿತ್ತು. ಹೀಗಾಗಿ ಇಂದು ಅಮೇರಿಕೆಯ ದಕ್ಷಿಣ–ಪ್ರಾಂತ್ಯ(ರಾಜ್ಯ)ಗಳಾದ ಕೆರೋಲಿನ್, ಪ್ಲೊರಿಡಾ, ಅಲಬಾಮಾ, ಮಿಸಿಸಿಪಿ, ಮತ್ತು ಲುಯಿಸಿಯಾನಗಳಲ್ಲಿ ಇಂದಿಗೆ ಅಲ್ಲಿಯ ಜನಸಂಖ್ಯೆಯ ಶೇಕಡಾ ಐವತ್ತರಿಂದ ಎಂಬತ್ತರಷ್ಟು ಜನ ನಿಗ್ರೋ ವಂಶಜರಿದ್ದಾರೆ. ಅದೇ ಉತ್ತರದ ಪ್ರಾಂತಗಳಲ್ಲಿ ಶೇಕಡಾ ಐದರಿಂದ ಇಪ್ಪತ್ತೈದರಷ್ಟು ಮಾತ್ರ ನಿಗ್ರೋಗಳಿದ್ದಾರೆ.

ಕೆಲವರ ಮೈಬಣ್ಣವಂತೂ ಕಗ್ಗತ್ತಲೆಯನ್ನೂ ಹಿಂದೆ ಹಾಕುವಷ್ಟು ಕಪ್ಪು. ಅಂತೆಯೇ ಅವರ ಈ ಕಪ್ಪು ಬಣ್ಣ ದೇವರಿಗೆ ಹತ್ತಿರವಾದದ್ದಂತೆ. ತಾವು `ದೇವರ ಮಕ್ಕಳು’ ಎಂದು ಅವರು ಸಾರಿಕೊಳ್ಳುತ್ತಾರೆ. ಬಣ್ಣದಂತೆ ಅವರ ಸ್ವರೂಪವಾದರೂ ವಿಚಿತ್ರವಾಗಿರುತ್ತದೆ. ಒಂದು ಇರುವೆಗೆ ಕೂಡ ಹಾಯಲು ಆಸ್ಪದವಿಲ್ಲದ ಅತಿ ದಪ್ಪ ಗುಂಗುರು–ಕೂದಲು, ಅಗಲವಾದ ಮೂಗು, ದಪ್ಪವಾದ ತುಟಿಗಳು ನೋಡಿ ಪರಿಚಯವಿಲ್ಲದವರು ಯಾರೂ ಬೆಚ್ಚಿಬೀಳುವಂತೆ ಅವರ ರೂಪ ವಿಕಾರವಾಗಿರುತ್ತದೆ.

ಇನ್ನೂ ಅವರ ಇರುವಿಕೆಯಾದರೂ ಇದಕ್ಕೆ ಅಪವಾದವಲ್ಲ. ತೀರ ಕೀಳುಮಟ್ಟದ ಜೀವನವನ್ನು ಇವರು ನಡೆಸುತ್ತಾರೆ. ಇವರು ವಾಸಿಸುವ ಓಣಿಗಳು ಪ್ರತ್ಯಕವಾಗಿದ್ದು ತುಂಬ ಕೊಳಕಾಗಿರುತ್ತವೆ. ಎಂದೂ ಬಣ್ಣ, ಬ್ರಶ್ಗಳನ್ನು ಕಾಣದ ಮನೆಯ ಗೋಡೆಗಳು, ಕುಡಿದೋ ಸಿಟ್ಟಿನ ಭರದಲ್ಲೊ ಒಡೆದ ಕಾಜುಗಳ ಕಿಟಕಿ ಮತ್ತು ಮನೆಯ ಬಾಗಿಲುಗಳು, ಈ ಬಿರುಕುಗಳಿಂದ ತಂಗಾಳಿ ಬರಬಾರದೆಂದು ಹಚ್ಚಿದ ವರ್ತಮಾನ–ಪತ್ರಗಳು; ಅಲ್ಲೊಂದಿಷ್ಟು ಇಲ್ಲೊಂದಿಷ್ಟು ರಾಶಿಯಾಗಿ ಬಿದ್ದ ಹರಕು ಬಟ್ಟೆಗಳು, ಅಂಗಳದ ತುಂಬ ಖಾಲಿಯಾದ ಸೆರೆಯ ಬಾಟ್ಲಿಗಳೂ, ಬರಿದಾದ `ಬಿಯರ್’ದ ಡಬ್ಬಿಗಳು, ತಿಪ್ಪೆಯ ರಾಶಿಯೆನಿಸುವ ಇಂಥ ಹಲವಾರು ಮನೆಗಳ ಮುಂದೆ ನಿಂತಿರುತ್ತದೆ. ಹೊಸ ವರ್ಷದ ಹೊಸ ಮಾದರಿಯ ಕಡಿಲಿಕ್ ಕಾರು!

ಈ ದೇವರ ಮಕ್ಕಳ ಆಕಾರ, ಮೈಬಣ್ಣ, ಮನೆಗಳಷ್ಟೆ ಅಸ್ತವ್ಯಸ್ತವಾಗಿದೆ ಅವರ ನಡತೆ, ಮೊದಲಿನಿಂದಲೂ ಶಿಕ್ಷಣದ ಕಡೆಗೆ ಲಕ್ಷ್ಯ ಕೊಟ್ಟಿರುವುದಿಲ್ಲ. (ಇವರ ಪೂರ್ವಜರು ಕೇವಲ ದೇಹಶ್ರಮಕ್ಕಾಗಿ ತರಲ್ಪಟ್ಟವರಷ್ಟೆ!) ಹೆಚ್ಚಿನ ಜನ ಪ್ರಾಥಮಿಕ, ಮಾಧ್ಯಮಿಕ ಮಟ್ಟಕ್ಕಿಂತ ಮುಂದೆ ಹೋಗುವದೇ ಇಲ್ಲ. ಹೀಗಾಗಿ ಕಟ್ಟಡದ ಕೆಲಸ. ಕಾರಖಾನೆಯ ಕೆಲಸ, ಪೆಟ್ರೋಲು ಮಾರುವುದು, ಊರಿನ ಸಫಾಯಿ ಮಾಡುವುದು ಇವೇ ಸಣ್ಣ–ಪುಟ್ಟ ವೃತ್ತಿಗಳನ್ನು ಕೈಕೊಂಡಿದ್ದಾರೆ. ಮನೆಯ ಇರುವಿಕೆ ಹೇಗಿದ್ದರೂ ಉತ್ತಮ ಪೋಷಾಕು ಬೇಕು. ಎರಡೂ ಹೊತ್ತು ಹೊಟ್ಟೆತುಂಬ ಊಟ ಸಿಗದಿದ್ದರೂ ಕುಡಿಯಲು ಸೇರೆ ಬೇಕು. ರಜೆಯ ದಿನಗಳು ಬಂದರಂತೂ ನಾಲ್ಕಾರು ದೇವರ ಮಕ್ಕಳು ಒಂದು ಮನೆಯ ಅಂಗಳದಲ್ಲಿ ಸೇರಿ ಒಂದೇ ಸಮನೆ ಸುರಾಪಾನ ನಡೆಸಿರುತ್ತಾರೆ. ಕುಡಿತಕ್ಕೆ ಸಂಬಂಧ ಪಟ್ಟ ಅಪರಾಧಗಳಾದರೂ ಕಡಿಮೆಯಿಲ್ಲ. ಜನಸಂಖ್ಯೆ ವಿಪರೀತ ಭರದಿಂದ ಬೆಳೆಯುತ್ತಿರುವ ಈ ಜನಾಂಗದಲ್ಲಿ ವಿವಾಹಬಾಹ್ಯ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಜನನ–ಪ್ರಮಾಣ (birthrate) ಬಿಳಿಯರ ಜನನ–ಪ್ರಮಾಣದ ಆರು ಪಟ್ಟು ಇದೆ! ವಿವಾಹ ವಿಚ್ಛೇದನ-ಪ್ರಮಾಣದಲ್ಲಿಯೂ ಬಿಳಿಯರನ್ನು ಹಿಂದೆ ಹಾಕುತ್ತಾರೆ. ತಂದೆ-ತಾಯಿಯರಿಂದ ಪ್ರತ್ಯೇಕಿಸಲ್ಪಟ್ಟ ಮಕ್ಕಳು ಬೀದಿಪಾಲಾಗುತ್ತಾರೆ. ಬಾಲಾಪರಾಧಿಗಳೂ ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ಡಾರೆ. ನಾಲ್ಕಾರು ಮಕ್ಕಳೂ ಕೂಡಿ ಹೊಂಚುಹಾಕಿ ಅಂಗಡಿಯೊಂದನ್ನು ಮುತ್ತಿ ಹಣ ದೋಚಿಕೊಂಡು ಹೋಗುವುದು ಸಾಮಾನ್ಯ ಮಾತು. ಮುದುಕಿಯರಿಗೆ ಚೂರಿ ತೋರಿಸಿ ಅವರ ಪರ್ಸನ್ನು ಅಪಹರಿಸುತ್ತಾರೆ. ಕಾರಿನ ಪೆಟ್ರೋಲ್ ಕದಿಯುವುದು, ಹಾಸ್ಟೆಲ್ಲಿನ ಕೋಣೆಗಳ ಕೀಲಿ ಮುರಿದು ವಿದ್ಯಾರ್ಥಿಗಳ ಸಾಮಾನುಗಳನ್ನು ಕಳವುಮಾಡುವದು ಇವು ದೈನಂದಿನ ಘಟನೆಗಳಾಗಿವೆ. ಶ್ವೇತ ತರುಣಿಯರನ್ನು ಹಿಂಸಿಸುವ ನಿಗ್ರೋಗಳಿಗೂ ಕೊರತೆಯಿಲ್ಲ.

ಈ ಕುಸಂಸ್ಕೃತಿ ಹೆಚ್ಚಿನ ಕರಿಯರಿಗೆ ಮೈಯುಂಡಿದೆ. ಅವರ ನಡತೆ ಅಸಹ್ಯವಾಗಿದ್ದಂತೆ ಮೈಗಳ್ಳತನದ್ದೂ ಆಗಿದೆ. ಯಾವದೇ ನೌಕರಿಯನ್ನು ಹೆಚ್ಚು ದಿನ ಕೈಕೊಳ್ಳುವುದು ಇವರಿಗೆ ಸೇರುವುದಿಲ್ಲ. ಚಿಕ್ಕ–ಪುಟ್ಟ ಕೆಲಸಗಳನ್ನು ವರ್ಷ ಎರಡು ವರ್ಷಗಳಿಗೆ ಬದಲಿಸುತ್ತಲೇ ಇರುತ್ತಾರೆ. ನೌಕರಿಯಿಲ್ಲದಿದ್ದರೆ ಹೊಟ್ಟೆಗೇನು ಎಂದು ಇವರು ಯೋಚಿಸಬೇಕಾಗಿಯೇ ಇಲ್ಲ. ಅಮೇರಿಕನ್ನರು ನಿರುದ್ಯೋಗದಿಂದ ಬಳಲಬಾರದೆಂದು ಅಮೇರಿಕನ್ ಸರಕಾರವು ಸಾಮಾಜಿಕ–ಸುರಕ್ಷತೆ (social-secutity) ಯ ಖಾತೆಯನ್ನು ತೆಗೆದಿದೆ. ನಿರುದ್ಯೋಗಿಯಾದ ಯಾವನೇ ಅಮೇರಿಕನ್ ಮಹನೀಯ ಅಥವಾ ಮಹಿಳೆ ಈ ಖಾತೆಯ ಆಫೀಸಿನಲ್ಲಿ ಹೆಸರು ನೋಂದಾಯಿಸಬಹುದು. ವಾರಕ್ಕೊಮ್ಮೆ ಇವರಿಗೆ ಸಂಬಳ ದೊರೆಯುತ್ತದೆ. ಇದು ತಾತ್ಪೂರ್ತಿಕ ಸಹಾಯವೆಂದಿದ್ದರೂ ದೀರ್ಘಾವಧಿಯ ವರೆಗೆ ಇದರ ಉಪಯೋಗ ಪಡೆದ, ಪಡೆಯುತ್ತಿರುವ ದೇವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಏನೂ ದುಡಿತವಿಲ್ಲದೇ ಈ `ಡೋಲ್’ (dole) ಸಂಬಳ ಸಿಗುತ್ತಿರುವಾಗ ಯಾಕೆ ಕಷ್ಟಪಡಬೇಕು ಎಂಬುದು ಅವರ ವಾದ. ಉತ್ತರದ ರಾಜ್ಯಗಳಲ್ಲಿ ನಿಗ್ರೋಗಳು ಸಾಕಷ್ಟು ಮುಂದುವರಿದಿದ್ದರೂ ಅವರ ಕೆಲವು ಅಸಹ್ಯ ಚಟಗಳು ಸುಲಭದಲ್ಲಿ ಕಳಚದಷ್ಟು ಆಳವಾಗಿ ಬೇರೂರಿವೆ. ಎಷ್ಟೇ ಕಲಿತಿರಲಿ, ಎಷ್ಟೇ ಒಳ್ಳೆಯ ಬಟ್ಟೆ ಧರಿಸಿರಲಿ, ಅವರು ವೈಯುಕ್ತಿಕ ಕೊಳಕುತನ ಬಿಟ್ಟಿರುವುದಿಲ್ಲ. ಪ್ರವಾಸದಲ್ಲಿ ಇವರು ತಮ್ಮೊಂದಿಗೆ ಸೆರೆ. ಹುರಿದ ಕೋಳಿಯ ಮಾಂಸ, ಬೇಯಿಸಿದ ತತ್ತಿ ಮುಂತಾದವುಗಳನ್ನು ತಂದಿರುತ್ತಾರೆ. ಬಸ್ಸು ಬಿಡುವ ಪುರುಸೊತ್ತಿಲ್ಲ, ಬುತ್ತಿಯ ಗಂಟು ಬಿಚ್ಚಿದರೆ! ಮಾಂಸವನ್ನು ಅಗಿದು, ಎಲವುಗಳನ್ನು ಚೀಪಿ ಚೀಪಿ ಅತ್ಯಂತ ಸ್ವಚ್ಛವಾಗಿಟ್ಟ ಬಸ್ಸಿನ ಒಳಗೇ ಚೆಲ್ಲುತ್ತಾರೆ! (ನಮ್ಮಲ್ಲಿಯ ಟ್ರೇನು, ಬಸ್ಸುಗಳೂ ನಮ್ಮವರ ಈ ಚಟವನ್ನು ಎತ್ತಿ ತೋರಿಸುತ್ತವೆ ನಿಜ. ಆದರೆ ಇಲ್ಲಿ ಉಲ್ಲೇಖಿಸಲ್ಪಟ್ಟ ಅಮೇರಿಕನ್ನರು–ಅರ್ಥಾತ್ ಅಮೇರಿಕನ್ ನಿಗ್ರೋಗಳು ಸುಶಿಕ್ಷಿತರು, ಮೇಲಿನ ವರ್ಗಕ್ಕೆ ಸೇರಿದವರು) ಐದೇ ನಿಮಿಷಗಳಲ್ಲಿ ಸ್ವಚ್ಛವಾಗಿ ಹೊಳೆಯುತ್ತಿದ್ದ ಬಸ್ಸಿನ ತಳವೆಲ್ಲ ಎಲುವಿನ ಚೂರು, ತತ್ತಿಯ ಕವಚ, ಖಾಲಿ ಬಾಟ್ಲಿ, ಸಿಗರೇಟಿನ ಬರಿದಾದ ಪ್ಯಾಕುಗಳು, ಕೈ ಒರೆಸಿಕೊಂಡು ಒಗೆದ ಕಾಗದದ ಟಾವೆಲ್ಗಳಿಂದ ತುಂಬಿಹೋಗುತ್ತದೆ.

ಕರಿಯರ ಪಕ್ಕದಲ್ಲಿ ಬಿಳಿಯರು ಕೂಡ್ರಲು ಒಪ್ಪುವುದಿಲ್ಲ ಎಂಬ ಸಾಮಾನ್ಯ ದೂರು ಇದೆ. ನಿಗ್ರೋಗಳ ಬಗ್ಗೆ ತುಂಬ ಸಹಾನುಭೂತಿಯಿಟ್ಟುಕೊಂಡ ನಾನೇ ಅವರ ಪಕ್ಕದಲ್ಲಿ ಕೂಡ್ರಲು ಒಪ್ಪದಿದ್ದಾಗ, ಅಮೇರಿಕನ್ನರು ನಿರಾಕರಿಸಿದರೆ ತಪ್ಪೇನಿದೆ? ನಿಗ್ರೋಗಳ ಕೇರಿಯಲ್ಲಿ ಬಿಳಿಯರು ಸಹಸಾ ವಾಸಿಸಲಾರರು. ಬಿಳಿಯರ ವಸತಿಯಲ್ಲಿ ನಿಗ್ರೋಗಳು ನೆಲೆಸುವುದು ಅವರಿಗೆ ಸರಿಬರಲಾರದು. ಅವರ ಅನಾಗರಿಕ ನಡತೆ, ದುಶ್ಚಟಗಳು, ಅನಾರೋಗ್ಯಕರ ಚಟಗಳು, ಕಳವು, ದೊಂಬಿ ಮುಂತಾದವನ್ನು ಯಾರು ತಾನೇ ಸಹಿಸಿಯಾರು? ಹಗಲಿನಲ್ಲಿ ಕೂಡ ನಿಗ್ರೋಗಳ ಕೇರಿಯಲ್ಲಿ ಹಾಯ್ದಾಡಲು ಎಷ್ಟೋ ಜನ ಹೆದರುತ್ತಾರೆ. ಹೀಗಿದ್ದಾಗ ಅವರನ್ನು ನೆರೆಯಲ್ಲಿ ಹೇಗೆ ತಾನೆ ವಾಸಿಸಲು ಕೊಟ್ಟಾರು?

ಅಮೇರಿಕೆಗೆ ಹೋದ ಹೊಸದರಲ್ಲಿ ನನಗೆ ವರ್ಣದ್ವೇಷದ ಬಗ್ಗೆ ಸಂತಾಪವೂ, ನಿಗ್ರೋ ಜನರ ಬಗ್ಗೆ ಹೆಚ್ಚಿನ ಸಹಾನುಭೂತಿ ಆದರಗಳು ಇದ್ದವು. ಅವರೊಂದು ಹತ್ತಿಕ್ಕಲ್ಪಟ್ಟ (depressed community) ಜನಾಂಗವೆಂದು ಕೊಂಡಿದ್ದೆ. ಆದರೆ ಅಮೇರಿಕೆಯ ವಾಸ್ತವ್ಯದಲ್ಲಿ ಈ ಜನರನ್ನು ವಿವಿಧ ಕೋನಗಳಿಂದ ತಿಳಿದುಕೊಳ್ಳಲು ಅವಕಾಶ ಸಿಕ್ಕಿತು. ಕೇವಲ ಬಣ್ಣದ ಮೇಲಿಂದಲೇ ಅಮೇರಿಕನ್ನರು ನಿಗ್ರೋಗಳನ್ನು ದ್ವೇಷಿಸುವುದಿಲ್ಲ. ಅದಕ್ಕೆ ಅನೇಕ ಆಂತರಿಕ ಕಾರಣಗಳಿವೆಯೆಂದು ನಾನು ತೀವ್ರವೇ ಕಂಡುಕೊಳ್ಳುವಂತಾಯಿತು. ನಾನು ನಿಗ್ರೋ ಅಲ್ಲದಿದ್ದರೂ ಕರಿಯ ಜನಾಂಗಕ್ಕೆ ಸೇರಿದವನಷ್ಟೇ? ಆದರೆ ನನ್ನ ಮೈಬಣ್ಣಕ್ಕಾಗಿ ಅವಮಾನಿತನಾಗುವ ಸಂದರ್ಭ ನಾಲ್ಕು ವರ್ಷಗಳಲ್ಲಿ ಒಮ್ಮೆಯಾದರೂ ಬರಲಿಲ್ಲ. ನಾನೊಬ್ಬ ಭಿನ್ನ ಜನಾಂಗದ ವ್ಯಕ್ತಿಯೆಂದು ಅನಿಸುವ ಸಂದರ್ಭ ಒಮ್ಮೆ ಕೂಡ ಬರಲಿಲ್ಲ.

ನಿಗ್ರೋ ಜನರ ನಡತೆ ಅನಾಗರಿಕವಾಗಿದ್ದರೆ ನಮ್ಮನ್ನೇಕೆ ನಿಗ್ರೋಗಳಂತೆ ನಡೆಸಿಕೊಳ್ಳಬೇಕು? ನಾವು ನಿಗ್ರೋಗಳಿಗಿಂತ ಭಿನ್ನವಾಗಿಲ್ಲವೇ? ಎಂದು ಎಷ್ಟೋ ಭಾರತೀಯ ವಿದ್ಯಾರ್ಥಿಗಳು ದೂರಿಕೊಳ್ಳುವದುಂಟು.

ನಿಗ್ರೋಗಳಷ್ಟು ಕೀಳುಮಟ್ಟದಲ್ಲಿ ಅಲ್ಲವಾದರೂ ಬಿಳಿಯರಿಗೆ ಅಸಹ್ಯವೆನಿಸುವ ರೀತಿಯಲ್ಲಿ ಅಮೇರಿಕೆಯಲ್ಲಿ. ಬಹುಸಂಖ್ಯಾತ ಭಾರತೀಯರು ಜೀವನ ನಡೆಸುತ್ತಾರೆಂದರೆ ಅತಿಶಯೋಕ್ತಿಯಾಗಲಾರದು. ನಮ್ಮ ಸ್ವಚ್ಚತೆಯ ಕಲ್ಪನೆಗೂ ಅವರ ಸ್ವಚ್ಛತೆಯ ಕಲ್ಪನೆಗೂ ಬಹಳ ವ್ಯತ್ಯಾಸವಿದೆ. (ನಮ್ಮಲ್ಲಿ ಸ್ವಚ್ಛತೆ ವೈಯಕ್ತಿಕ ವಿಚಾರ; ಅದರಲ್ಲಿ ಸ್ವಚ್ಛತೆಯೆಂದರೆ ಸಾಮಾಜಿಕ ಆಚಾರ) ಇಷ್ಟಾಗಿಯೂ ಉತ್ತರದ ಅಮೇರಿಕನ್ನರು ತಾವು ನಿಗ್ರೋಗಳನ್ನು ಸರಿಸಮಾನತೆಯಿಂದ ಕಾಣುತ್ತೇವೆ. ಲಿಂಕನ್ನರು ದಾಸ್ಯತ್ವವನ್ನು ಕೊನೆಗೊಳಿಸಿ ಒಂದು ನೂರು ವರ್ಷ ದಾಟಿದರೂ ಇನ್ನೂ ದಕ್ಷಿಣದಲ್ಲಿ ಅದು ಉಳಿದುಕೊಂಡಿದೆ. ದಕ್ಷಿಣದವರು ಸಂಕುಚಿತ ಮನೋಭಾವದವರು ಎಂದು ದಕ್ಷಿಣ ರಾಜ್ಯಗಳನ್ನು ದೂರುತ್ತಾರೆ! ಪ್ರೆಸಿಡೆಂಟ್ ಕೆನಡಿಯವರು ಅಧಿಕಾರಕ್ಕೆ ಬಂದ ಮೇಲೆ `ಸಮಾನತೆ’ಯ ಅಂದೋಲನಕ್ಕೆ ಹೆಚ್ಚಿನ ಪುಟ ದೊರೆಯಿತು. ಅವರ ನಾಗರಿಕ–ಸಮಾನ ಹಕ್ಕುಗಳು ಕಾನೂನು (civil-rights-law) ಉತ್ತರ ಅಮೇರಿಕನ್ನರನ್ನು ಪ್ರಚೋದಿಸಿತು. ಇದೇ ಸಮಯವೆಂದು ಸಮಾನತೆಯ ಹಕ್ಕನ್ನು ಜನರಿಗೆ ತಿಳಿಸುವ, ಸಮಾಜ–ಸುಧಾರಣೆ ಕೈಕೊಳ್ಳುವ `ನಾಯಕರು’ ಅಲ್ಲಲ್ಲಿ ತಲೆಯೆತ್ತಲಾರಂಭಿಸಿದರು. ಅನೇಕರು ದಕ್ಷಿಣ ರಾಜ್ಯಗಳಲ್ಲಿ ಹೋಗಿ ಚಳುವಳಿ ಪ್ರಾರಂಭಿಸಿದರು. ಬಿಳಿಯರಿಗೇ ಮೀಸಲಾದ ಕಾಲೇಜು, ಉದ್ಯಾನ, ಚರ್ಚುಗಳಲ್ಲಿ ನಿಗ್ರೋಗಳು ನುಗ್ಗಲಾರಂಭಿಸಿದರು. ರಾಜ್ಯ ಸರಕಾರ ಇದನ್ನು ತಡೆಯಲು ಪೋಲಿಸುಪಡೆ ಕಳಿಸಿದಾಗ ಕೇಂದ್ರವರ್ತಿ ಸರಕಾರ ತನ್ನ ಸೈನ್ಯ ಕಳಿಸಿ ನಿಗ್ರೋಗಳಿಗೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಕೊಡಿಸಿತು. ರೊಚ್ಚಿಗೆದ್ದ ಬಿಳಿಯರು ಕೊಲೆ, ಸುಲಿಗೆ, ಹೊಡೆದಾಟಗಳನ್ನು ನಡೆಸಿದರು. ಉತ್ತರದಲ್ಲಿದ್ದು ವರ್ತಮಾನಪತ್ರಗಳನ್ನು, ಓದುತ್ತಿದ್ದವರಿಗೆ ದಕ್ಷಿಣದಲ್ಲಿ ಮೈಬಣ್ಣದ ಹೆಸರಿನಲ್ಲಿ ದಕ್ಷಿಣದ ಬಿಳಿಯರು ಹತ್ಯಾಕಾಂಡ ನಡೆಸಿದ್ದಾರೆ ಎಂಬ ಕಲ್ಪನೆ ಬಾರದಿರದು. ಉತ್ತರದ ವಿದ್ಯಾರ್ಥಿಗಳು ಕೂಡ ಆಂದೋಲನ ನಡೆಸಿದರು. ಇದೆಲ್ಲವನ್ನು ದಿನನಿತ್ಯ ಓದಿ ನೋಡಿ ನನಗೆ ದಕ್ಷಿಣಕ್ಕೆ ಹೋಗಿ ನಿಜ ಸಂಗತಿಯನ್ನು ಕಣ್ಣಾರೆ ನೋಡಬೇಕೆಂಬ ಹಂಬಲ ಹುಟ್ಟಿತು. ಅಂತೆಯೇ ಅ ಬಗ್ಗೆ ಪ್ರಯತ್ನಿಸತೊಡಗಿದೆ.

ನಿಶ್ಚಯಿಸಿದಷ್ಟು ಹೋಗುವುದು ಸುಲಭವಾಗಿರಲಿಲ್ಲ. ಒಂದು ವರ್ಷದ ಸತತ ಪ್ರಯತ್ನ ಮಾಡಬೇಕಾಯಿತು. ಅಮೇರಿಕ ಸರಕಾರದೊಂದಿಗೆ ಪತ್ರವ್ಯವಹಾರ ನಡೆಸಿ ಅದರ ದಕ್ಷಿಣದ ಕೆಲವು ಸಂಶೋಧನಾ–ಕೇಂದ್ರಗಳಲ್ಲಿ ತರಬೇತಿ ಪಡೆಯಲು ಅವಕಾಶಕ್ಕಾಗಿ ಕೇಳಿಕೊಂಡೆ. ತರಬೇತಿ ಕೊಡಲು ಒಪ್ಪಿದರೂ ದಕ್ಷಿಣದ ಪ್ರವಾಸಕ್ಕೆ ಕಳಿಸಲು ಸರಕಾರ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ.

ಒಂದು ದಿನ ಬೆಳಿಗ್ಗೆ, ನಮ್ಮ ಡೀನ್ (ಪ್ರಿನ್ಸಿಪಾಲ್)ರಿಂದ ನನಗೆ ಕರೆ ಬಂದಿತು. `ಹಾಯ್ ಹಾಯ್’ಗಳ ನಂತರ ಅಂದು ಬೆಳಿಗ್ಗೆ ತಮಗೆ ವಾಶಿಂಗ್ಟನ್ನಿನಿಂದ ಫೋನ್ ಬಂದಿತ್ತೆಂದು ಹೇಳಿದರು.

“ನಿಮ್ಮ ಕಾಲೇಜಿನ ಕಾಮತನೆಂಬ ಭಾರತೀಯ ವಿದ್ಯಾರ್ಥಿಯಿದ್ದಾನಷ್ಟೆ. ಆತನ ಬೇಡಿಕೆಯ ಪ್ರಕಾರ ತರಬೇತಿಗೆ ದಕ್ಷಿಣಕ್ಕೆ ಕಳಿಸಲಿದ್ದೇವೆ. ಆದರೆ ನಿಮಗೆ ಗೊತ್ತಿದ್ದಂತೆ ಅಲ್ಲಿ ವರ್ಣಭೇದ ಚಳುವಳಿ ಜೋರಾಗಿದೆ. ಕಪ್ಪುಬಣ್ಣದವರನ್ನು ಹಿಂದೆ ಮುಂದೆ ನೋಡದೇ ಬಡಿಯುತ್ತಾರೆ … ನಿಮ್ಮ ಈ ಕಾಮತ ಕಾಣಲು ನಿಗ್ರೋವಿನಂತೆ ಇದ್ದಾನೆಯೇ? ತಂಟೆಖೋರ ಅಥವಾ ಇಲ್ಲದ ಉಸಾಬರಿಯ ಮನುಷ್ಯನೇ? ದಂಗೆ–ಗಿಂಗೆಯ ಪ್ರವೃತ್ತಿಯವನೇ?” ಎಂದು ಮುಂತಾಗಿ ಫೋನಿನ ಮೇಲೆ ಕೇಳಿದರಂತೆ. ಅದಕ್ಕೆ ಡೀನರು–

“ಕಳೆದ ಮೂರು ವರ್ಷಗಳಿಂದ ಕಾಮತನನ್ನು ವೈಯುಕ್ತಿಕವಾಗಿ ನಾನು ಬಲ್ಲೆ. ನಮ್ಮ ವಿದ್ಯಾರ್ಥಿಗಳಲ್ಲಿ ಆತನೊಬ್ಬ ಸಾಧು ಮತ್ತು ನಿರುಪದ್ರವಿ ಪ್ರಾಣಿ. ಕಾಣಲು ಬಿಳಿಯನಂತೆ ಇಲ್ಲದಿದ್ದರೂ ಖಂಡಿತ ನಿಗ್ರೋವಿನಂತೆ ಇಲ್ಲ. ಆತನನ್ನು ಎಲ್ಲಿಯೇ ಕಳಿಸಲು ನಾನು ಅಳಕುವುದಿಲ್ಲ.” ಎಂದು ಉತ್ತರಿಸಿದರಂತೆ. ಇದೆಲ್ಲ ನನಗೆ ವಿವರಿಸಿ.

“ನೀನು ಯಾವ ತಂಟೆಯಲ್ಲೂ ಭಾಗವಹಿಸುವುದಿಲ್ಲವೆಂಬ ಆತ್ಮವಿಶ್ವಾಸ ನನಗಿದ್ದರೂ ದಕ್ಷಿಣದಲ್ಲಿ ಸಂಚರಿಸುವಾಗ ಜಾಗರೂಕವಾಗಿರು. ಇಂತಹ ವರ್ಣದ್ವೇಷ ನಮ್ಮಲ್ಲಿರುವುದು ನಮಗೆ ಬಹಳ ಅಪಮಾನಕರವಾಗಿದೆ. ಬಿಳಿಯರೊಡನೆ ಸರಿಸಮಾನತೆ ತೋರಿಸುವ ಗೊಡವೆಗೆ ಹೋಗದೇ ನಿನಗೆ ಬೇಕಾದಲ್ಲಿ ಊಟಮಾಡುವ, ವಸತಿ ಹಾಕುವ ಅಧಿಕಾರವಿದ್ದರೂ ಅದನ್ನು ದೃಢೀಕರಿಸದೇ ಎಲ್ಲಿ ಸುಲಭವಾದ ಸೌಕರ್ಯಗಳು ದೊರೆಯುತ್ತವೋ (ಅಂದರೆ ನಿಗ್ರೋ ಸಂಸ್ಥೆಗಳಲ್ಲೇ ಇರು ಎಂದರ್ಥ!) ಅಲ್ಲೇ ಇರು.” ಎಂದು ತಡವರಿಸುತ್ತ ಬೋಧಿಸಿದರು. ನಂತರ ನನ್ನ ವರ್ತನೆ ಹೇಗಿರಬೇಕು, ಹೇಗೆ ಇರಬಾರದು ಎಂದು ಉಪದೇಶಿಸಿದರು. ಇದೆಲ್ಲ ದೀರ್ಘ ಪ್ರಸ್ತಾಪನೆ ನೋಡಿ ದಕ್ಷಿಣಕ್ಕೆ ಹೋಗಲೋ ಬೇಡವೋ ಎಂದು ಅಧೈರ್ಯವೆನಿಸಿತು. ಆದರೂ ಅಲ್ಲಿಯ ಹತ್ಯಾಕಾಂಡ ಕಣ್ಣಾರೆ ಕಾಣುವ ಹಂಬಲ ಹೆಚ್ಚಾಗಿದ್ದರಿಂದ ಹೋಗಿಯೇ ತೀರುವದೆಂದು ನಿರ್ಧರಿಸಿದೆ.

ಪ್ರವಾಸಕ್ಕೆ ಹೊರಡುವ ಮೊದಲು ಕನ್ನಡಿಯಲ್ಲಿ ಎರಡೆರಡು ಬಾರಿ ನೋಡಿಕೊಡು ನಿಗ್ರೋವಿನಂತೆ ಕಾಣುತ್ತೇನೆಯೇ ಇಲ್ಲವೇ ಎಂದು ಖಚಿತಪಡಿಸಿಕೊಂಡೆ. ವಾಶಿಂಗ್ಟನ್ ಡಿ.ಸಿ.ಗೆ ಹೋಗಿ ಉತ್ತರ ದಕ್ಷಿಣ ಕೆರೊಲಾಯಿನಾ ರಾಜ್ಯಗಳನ್ನು ಸಂದರ್ಶಿಸಿದೆ. ಕರಿಯರು ನನ್ನನ್ನು ನೋಡಿ ತಮ್ಮ ಬಂಧುವೆಂದು ಹ್ಯಾಟ್ ಮುಟ್ಟಿ ವಿನಯವನ್ನು ತೋರಿಸುತ್ತಿದ್ದರು. ಕೆಲವರಂತೂ ಹ್ಯಾಟನ್ನು ತೆಗೆದು ತಲೆ ಬಗ್ಗಿಸಿ ನಮ್ರತೆಯನ್ನು ವ್ಯಕ್ತಪಡಿಸಿದರು.

ಉತ್ತರದಲ್ಲಿ ಇಲ್ಲದ ಆ ಸೌಜನ್ಯವನ್ನು ದಕ್ಷಿಣದವರಲ್ಲಿ ಕಂಡು ಸಂತೋಷವಾಯಿತು. ನಾನು ಅಲ್ಪಾವಧೀ–ತರಬೇತಿ ಪಡೆಯಲಿದ್ದ ಸಂಸ್ಥೆಗಳಲ್ಲಿ ಮೇಲಾಧಿಕಾರಿಗಳೆಲ್ಲ ಶ್ವೇತವರ್ಣಿಯರು, ನಿಗ್ರೋಗಳೆಲ್ಲ ಚಿಕ್ಕ–ಪುಟ್ಟ ನೌಕರಿಯಲ್ಲಿದ್ದರು. ಯಾವಾಗಲೂ ಬಿಳಿಯರೊಡನೆಯೇ ಸಂಚರಿಸುತ್ತಿದ್ದುರಿಂದ ನನಗೆ ಯಾವ ತೊಂದರೆಯೂ ಆಗಲಿಲ್ಲವೆಂದುಕೊಂಡೆ. ನಂತರ ಪ್ಲೋರಿಡಾ, ಅಲಬಾಮಾ, ಮಿಸಿಸಿಪಿ ರಾಜ್ಯಗಳಲ್ಲಿ ಒಬ್ಬನೇ ಸುತ್ತಾಡಲಾರಂಭಿಸಿದೆ, ಆದರೂ ನಿರೀಕ್ಷಿಸಿದ ಯಾವ ಆತಂಕವೂ ಒದಗಲಿಲ್ಲ. ಬದಲಾಗಿ ನನಗೆ ಹೊಸ ಜ್ಞಾನೋದಯವಾಗತೊಡಗಿತು.

ಈ ರಾಜ್ಯಗಳ ಊರುಗಳಲ್ಲೆಲ್ಲ ಹೋದಲ್ಲಿ ಬಸ್ನಿಲ್ದಾಣಗಳಲ್ಲಿ ಕರಿಯರಿಗೆ ಬೇರೆ, ಬಿಳಿಯರಿಗೆ ಬೇರೆ ಕೂಡ್ರಲು ವ್ಯವಸ್ಥೆಯಿತ್ತು. ನಾನು ಮೊದಲಿಗೆ ಹೋದವನು ಕರಿಯರಿಗೆ ಮೀಸಲಾದ ಕುರ್ಚಿಯ ಮೇಲೆ ಕುಳಿತೆ. ಹತ್ತು ನಿಮಿಷಗಳ ನಂತರ ಎದ್ದುಹೋಗಿ ಬಿಳಿಯರೊಡನೆ ಕುಳಿತೇ ಯಾರೂ ಏನೂ ಅನ್ನಲಿಲ್ಲ. ಪಕ್ಕದಲ್ಲಿ ಕುಳಿತ ಬಿಳಿಯರೂ ಎದ್ದು ಹೋಗಲಿಲ್ಲ. ಕುಡಿಯುವ ನೀರಿನ ವ್ಯವಸ್ಥೆ, ಮೂತ್ರಾಲಯಗಳು, ಟಿಕೆಟಿನ ಕಿಡಿಕಿಗಳು ಎಲ್ಲೆಲ್ಲೂ ಪ್ರತ್ಯೇಕವಾಗಿದ್ದವು. ನಾನು ನನ್ನ ಅನುಕೂಲದಂತೆ ಎರಡರ ಉಪಯೋಗವನ್ನು ಪಡೆಯುತ್ತಿದ್ದೆ. ಎಲ್ಲೂ ನನಗೆ ವಿರೋಧ ಬರದೇ ಇದ್ದುದನ್ನು ನೋಡಿ ನಿರಾಶೆಯಾಯಿತು. ವರ್ಣದ್ವೇಷ ಹೆಚ್ಚಾಗಿರುವ ಅಲಬಾಮಾ, ಮಿಸಿಸಿಪಿ ರಾಜ್ಯಗಳಲ್ಲಿ ಕೂಡ ಶ್ವೇತವರ್ಣೀಯರ ಹೋಟೇಲಿನಲ್ಲೇ ಇಳಿದುಕೊಂಡಿದ್ದೆ. 2 ಒಮ್ಮೆ ಜಾಕ್ಸನ್ (ಮಿಸಿಸಿಪಿ) ಊರಿಗೆ ಹೋದಾಗ ಹೀಗೆಯೇ ಸುತ್ತಾಡುತ್ತ ಹೊರಟಿದ್ದೆ. ಹೊಟ್ಟೆ ಹಸಿದಾಗ ಹೊಟೇಲುಗಳತ್ತ ಕಣ್ಣು ಹಾಯಿಸಿದೆ. ಕೊನೆಗೊಮ್ಮೆ ಶ್ವೇತವರ್ಣಿಯರಿಗೇ ಮೀಸಲೆಂದು ತೋರುವ ಭೋಜನಾಲಯವನ್ನು ನೋಡಿ ಧೈರ್ಯಮಾಡಿಕೊಂಡು ಒಳಹೊಕ್ಕೆ.

“ನಾನು ನಿಮ್ಮಲ್ಲಿ ಊಟಮಾಡಬಹುದೇ?” ಎಂದು ಕೇಳಿದೆ ಮ್ಯಾನೇಜರ್ ಹೆಚ್ಚಿನ ವಿನಯದಿಂದ,

“ಯಾಕಾಗಬಾರದು?” ಎಂದ ಅಲ್ಲಿ ತೂಗುಹಾಕಿದ “ಪ್ರವೇಶಾಧಿಕಾರ ನಮ್ಮದು” (right of admission with the manager) ಎಂಬ ಬೋರ್ಡಿನತ್ತ ತೋರಿಸುತ್ತ,

“ಕರಿಯರಿಗೆ ಪ್ರವೇಶವಿಲ್ಲ ಎಂಬ ಅರ್ಥದಲ್ಲಿ ಅದನ್ನು ತೂಗುಹಾಕಿರಬಹುದು ಎಂದುಕೊಂಡು ಕೇಳಿದೆ” ಎಂದೆ. ಮ್ಯಾನೇಜರ್ ಮುಗುಳುನಗೆ ನಗುತ್ತ,

“ನೀವು ಉತ್ತರದಿಂದ ಬಂದಿದ್ದೀರಿ ಎನ್ನುವುದಕ್ಕೆ ಬೇರೆ ಪುರಾವೆ ಬೇಕಾಗಿಲ್ಲ. ಉತ್ತರದವರಿಗೆಲ್ಲ ನಮ್ಮ ಬಗ್ಗೆ ತೀರ ತಪ್ಪು ಕಲ್ಪನೆಯಿದೆ. ಕರಿಯದೆಲ್ಲ ಕಹಿ ಎಂದು ನಾವು ನಂಬಿದ್ದೇವೆ, ಎಂದು ಅವರು ತಿಳಿಯುತ್ತಾರೆ. ನೀವು ನಿಗ್ರೋ ಎಂದು ಭ್ರಾಮಿಸುವಷ್ಟು ಮಂಕಲ್ಲ ನಾವು. ಒಂದು ವೇಳೆ ನಿಗ್ರೋ ಆಗಿದ್ದರೂ ಮೈಬಣ್ಣದಿಂದ ಮಾನವನ ಯೋಗ್ಯತೆಯನ್ನು ನಿರ್ಧರಿಸುವಷ್ಟು ಅಧೋಗತಿಗೆ ನಾವು ಇನ್ನೂ ಇಳಿದಿಲ್ಲ … ಅಸಂಸ್ಕೃತ, ಕ್ರೂರ ನಿಗ್ರೋಗಳಿಗೂ ನಮ್ಮಲ್ಲಿ ಪ್ರವೇಶವಿಲ್ಲದಿದ್ದರೆ, ಅದೇ ಗುಂಪಿಗೆ ಸೇರಿದ ಬಿಳಿಯರಿಗೂ ನಮ್ಮಲ್ಲಿ ಪ್ರವೇಶವಿಲ್ಲ. ಮೊನ್ನೆ ಕುಡಿದು ಬಂದ ಬಿಳಿಯನೊಬ್ಬ ನಮ್ಮ ಪರಿಚಾರಿಕೆಯ ಮೇಲೆ ಕೈಮಾಡಲು ಹೋದಾಗ ನಾನೇ ಅವನಿಗೆ ಎರಡೇಟು ಬಿಗಿದು ಪೋಲಿಸರ ಕೈಗೆ ಕೊಟ್ಟು ಬಂದಿದ್ದೇನೆ. ತಿರುಗಿ ನಮ್ಮ ಭೋಜನಾಲದ ಮೆಟ್ಟಲು ಏರಗೊಟ್ಟಿಲ್ಲ. ಇದೆಲ್ಲ ಉತ್ತರದವರೆಗೆ ಹೇಗೆ ತಿಳಿಯಬೇಕು?” ಎಂದು ನಿರಾಶೆಯನ್ನು ವ್ಯಕ್ತಪಡಿಸಿದ. ಊಟ ಮಾಡುತ್ತಿದ್ದಾಗ ಸ್ವತಃ ಎರಡು ಮೂರು ಬಾರಿ ವಿಚಾರಿಸಿದ. ನಾನಿದ್ದ ಎಂಟು ಹತ್ತು ದಿನ ಬೇರೆ ಬೇರೆ ಭೋಜನಾಲಯಗಳಿಗೆ ಹೋಗುತ್ತಿದ್ದೆ. ಅವರೆಲ್ಲ ಬಿಳಿಯರದಾರೂ ನನ್ನನ್ನು ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಿದ್ದರು. ಒಂದು ರೀತಿಯಿಂದ ನೋಡಿದರೆ ಉತ್ತರದಲ್ಲಿ ಎಂದು ಸಿಗದ ಸೌಜನ್ಯಪೂರ್ಣ ಸ್ವಾಗತ, ಆದರಪೂರ್ವಕ ಸತ್ಕಾರ ದಕ್ಷಿಣದಲ್ಲಿ ದೊರೆತವು. ಗಲ್ಫ್ಪೋರ್ಟ (ಮಿಸಿಸಿಪಿ)ದಲ್ಲಿ ಹೋಟೇಲೊಂದರಲ್ಲಿ ಇಳಿದುಕೊಂಡಿದ್ದೆ. ಭಾರತೀಯರು ಹೆಚ್ಚಾಗಿ ಹೋಗದ ಊರಾದ್ದರಿಂದ ಹೆಲವರು ಹೆಚ್ಚಿನ ಕುತೂಹಲದಿಂದ ಆಗಾಗ್ಗೆ ನನ್ನ ಕೋಣೆಗೆ ಬಂದು ಭಾರತದ ಬಗ್ಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಮಾತು ಅವರತ್ತ ಹೊರಳಿದಾಗ ತಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದರು.

“ಈ ಉತ್ತರದವರು ನಮ್ಮ ಹೆಸರನ್ನು ಎಲ್ಲೆಡೆ ಕೆಡಿಸಿಬಿಟ್ಟಿದ್ದಾರೆ. ದಕ್ಷಿಣದವರ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಇವರಿಗೇನು ಗೊತ್ತು? ಮೊನ್ನೆ ಹುಟ್ಟಿದ ಮಕ್ಕಳು … ನಾವೇನು ಮಾಡಬೇಕು, ಏನು ಮಾಡಬಾರದು ಎಂದು ಕಲಿಸಲು ಉತ್ತರದಿಂದ ಬರುತ್ತಿದ್ದಾರೆ. ತಲೆತಿರುಕ ದಾಕ್ಷಿಣಾತ್ಯರು ಅವರಿಗೆ ಚೆನ್ನಾಗಿಯೇ ಬುದ್ಧಿ ಕಲಿಸಿದ್ದಾರೆ. (ಸಮಾನತೆಯ ಮಹತ್ವವನ್ನು ದಕ್ಷಿಣದವರಿಗೆ ಬೋಧಿಸಲು ಬಂದ ಕಾಲೇಜು ವಿದ್ಯಾರ್ಥಿಗಳನ್ನು ಮಿಸಿಸಿಪಿ ಅಲಬಾಮಾಗಳಲ್ಲಿ ಚೆನ್ನಾಗಿ ಥಳಿಸಿದ್ದರು, ಕೆಲವರ ಕೊಲೆಯೂ ಆಗಿತ್ತು.) ಶತಮಾನಗಳಿಂದ ನಿಗ್ರೋಗಳೂ ನಾವೂ ಒಟ್ಟಿಗೆ ಬದುಕುತ್ತಿಲ್ಲವೇ? ಒಂದು ಕಾನೂನು, ಕೆಲವು ಭಾಷಣಗಳಿಂದ ಬಿಡಿಸುವಷ್ಟು ಸುಲಭವೇ ಈ ಸಮಸ್ಯೆ? ಇಲ್ಲಿ (ದಕ್ಷಿಣದಲ್ಲಿ) ಕೂಡ ಇದೇ ಸಮಯವೆಂದು ಬಿಳಿಯ ಮತ್ತು ಕರಿಯ ನಾಯಕರು ನಾಯಿಕೊಡೆಯಂತೆ ಬೆಳೆದುಬಿಟ್ಟಿದ್ದಾರೆ. ನಮ್ಮಷ್ಟಕ್ಕೆ ನಮ್ಮನ್ನು ಬಿಟ್ಟರೆ ಈ ಸಮಸ್ಯೆಗೆ ಉತ್ತರ ಹುಡುಕೇವು ಒಂದಿಲ್ಲ ಒಂದು ದಿನ, ಸರಕಾರ ಏನೋ ಮಾಡಹೋಗಿ ಏನಾದರೊಂದು ಘಟಿಸಿರುತ್ತದೆ.

ದಕ್ಷಿಣದ ಪ್ರವಾಸದಲ್ಲಿ ನನಗೆ ಕಂಡುಬಂದದ್ದು ಇಷ್ಟು; ನಿಗ್ರೋ ಜನರನ್ನು ಮುಂದೆ ತರಲು ಅಲ್ಲಿಯ ಬಿಳಿಯರು ಯಾವ ಪ್ರಯತ್ನ ಮಾಡದಿದ್ದರೂ ಹತ್ತಿಕ್ಕುವ ಯತ್ನ ನಡೆಸಿಲ್ಲ. ನಿಗ್ರೋ ಜನರಾದರೂ ತಮಗೆ ಇದ್ದ ಸವಲತ್ತುಗಳ ಪ್ರಯೋಜನ ಪಡೆದುಕೊಂಡಿಲ್ಲ. ಮುತ್ತಾತಂದಿರ ಪರಂಪರೆಯಲ್ಲಿ ಅಜ್ಜ, ತಂದೆ, ಮಕ್ಕಳು, ಮರಿಮಕ್ಕಳು ಬದುಕುತ್ತಿದ್ದಾರೆ, ಬಿಳಿಯರನ್ನು ತಮಗಿಂತ ಮುಂದುವರಿದ ಜನಾಂಗವೆಂದು ಒಪ್ಪಿಕೊಂಡಿದ್ದಾರೆ. ಅಂತೆಯೇ ಅವರಿಗಿಂತ ಕಡಿಮೆ ಸಂಬಳಕ್ಕೆ ಅವರಿಗಾಗಿ ದುಡಿಯಲು ಹಿಂಜರಿಯುವುದಿಲ್ಲ. ಬಿಳಿಯರಿಗಾದರೂ ಅವರು ನಿಕೃಷ್ಟರೆಂಬ ಭಾವನೆ ಸರ್ವಸಾಮಾನ್ಯವಾಗಿ ಇಲ್ಲ. ಇಬ್ಬರೂ ಪ್ರತ್ಯೇಕವಾಗಿ ತಮ್ಮ ಬಾಳನ್ನು ಸಾಗಿಸುತ್ತಾರೆ. ಇಷ್ಟು ವರ್ಷಗಳಲ್ಲಿ ನಿಗ್ರೋ ಜನರು ತಮ್ಮ ಮತಪ್ರದರ್ಶನದ ಗೋಜಿಗೆ ಹೋಗಿಲ್ಲ. ಅಂತೆಯೇ ಬಹುಸಂಖ್ಯಾತ ನಿಗ್ರೋ ಜನರಿಗೆ ಮತಾಧಿಕಾರವಿಲ್ಲ. ಈ ರಾಜ್ಯಗಳಲ್ಲಿ. ಈಗ `ಹೊಸ ಜಾಗೃತಿ’ಯ ನಾಯಕರು ನಿಗ್ರೋಗಳಿಗೆ ಮತಪ್ರಜ್ಞೆಯನ್ನು ಒದಗಿಸುತ್ತಾರೆ. ಇವರಿಗೆಲ್ಲ ಮತಾಧಿಕಾರರ ಹಕ್ಕು ಬಂದರೆ ಕ್ರಮೇಣ ಕರಿಯರ ಕೈಯಲ್ಲಿ ಅಧಿಕಾರ ಹೋಗಿ ತಾವು ಅವರ `ಮರ್ಜಿ’ಗೆ ಒಳಪಡಬೇಕಾದಿತೆಂಬ ಕಳವಳ ಬಿಳಿಯರದು. ನಿಗ್ರೋ ಜನರು ಬಹುಸಂಖ್ಯಾಕರಾದ ಅಲಬಾಮಾ. ಮಿಸಿಸಿಪಿಗಳಲ್ಲಿ ಈ ಭಾವನೆ ಪ್ರಬಲವಾಗಿದೆ. ಕೇಂದ್ರಸರಕಾರ ಹೊಸ ಕಾನೂನನ್ನು (civil-rights-law) ಬಲತ್ಕಾರವಾಗಿ ಜಾರಿಯಲ್ಲಿ ತರಲು ಯತ್ನಿಸಿದ್ದರಿಂದ ಜನ ರೊಚ್ಚಿಗೆದ್ದಿದ್ದಾರೆ. ಸಾವಧಾನದಿಂದ ಹೃದಯ ಪರಿವರ್ತನೆಯಾಗಬೇಕಾದರೆ ಕೆಲಸಕ್ಕೆ ಕಾನೂನು, ಸೈನ್ಯಬಲಗಳನ್ನು ಪ್ರಯೋಗಿಸಿದರೆ ಸಮಸ್ಯೆ ಇನ್ನಷ್ಟು ಜಟಿಲವಾಗದೇ ಇದ್ದೀತೇ ನಮ್ಮ ಸರಕಾರ ಎಷ್ಟೊಂದು ಕಾಯದೆಗಳಿಂದ, ಧನಸಹಾಯದಿಂದ, ಸಮಾಜ–ಸುಧಾರಕ ಕಾರ್ಯಕ್ರಮಗಳಿಂದ ಹರಿಜನರ ಸಮಸ್ಯೆ ಬಿಡಿಸಲು ಯಶಸ್ವಿಯಾಗದಿದ್ದಾಗ ಅಮೇರಿಕೆಯಲ್ಲಿ ನೂರಾರು ವರ್ಷಗಳಿಂದ ಬೆಳೆದು ಬಂದ ಎರಡು ತೀರ ವಿರುದ್ಧ ಜನಾಂಗಗಳ ಈ ಸಮಸ್ಯೆಯನ್ನು ಸುಲಭದಲ್ಲಿ ಹೇಗೆ ಬಿಡಿಸಲಾದೀತು?

ದಿವಗಂತ ಕೆನಡಿಯವರ `civil-rights’ ಕಾನೂನು ಸಾಮಾಜಿಕವಾದ ಸಮಾನತೆಯನ್ನು ಸ್ಥಾಪಿಸುವುದರಲ್ಲಿ ಯಶಸ್ವಿಯಾಗದೇ ಅಮೇರಿಕನ್ ಜನಾಂಗದಲ್ಲಿ ಅಲ್ಲೋಲಕಲ್ಲೋಲವನ್ನೆಬ್ಬಿಸಿದೆ. ಇಂದು ದಕ್ಷಿಣದವರು ನಿಗ್ರೋಗಳನ್ನಷ್ಟೆ ಅಲ್ಲದೇ ಉತ್ತರದವರನ್ನೂ ದ್ವೇಷಿಸುತ್ತಿದ್ದಾರೆ. ಉತ್ತರದವರು ಇದನ್ನೊಂದು ಸಾಮಾಜಿಕ ಕ್ರಾಂತಿಯೆಂದು ನಂಬಿದರೆ. ದಕ್ಷಿಣದವರು ಇದೊಂದು ಅವ್ಯಾವಹಾರಿಕ, ಅನಪೇಕ್ಷಿತ ಗೊಂದಲವೆಂದು ತಿಳಿಯುತ್ತಾರೆ. ಏನೇ ಆದರೂ ನಿಗ್ರೋ ಜನರಿಗೆ ಮಾತ್ರ ಇದಾವುದರ ನೈಜ ಲಾಭ ದೊರೆತಿಲ್ಲ. ಅವರು ಮಾಡಿಕೊಳ್ಳುವಂತೆಯೂ ಇಲ್ಲ.

ದೇವರ ಮಕ್ಕಳ ಪ್ರಗತಿಗೆ ಅಡ್ಡ ಬಂದಿರುವದು ಬಿಳಿಯರ ವಿರೋಧವಲ್ಲ. ತಮ್ಮ ತಮ್ಮಲ್ಲಿಯ ಒಳ–ಜಗಳ, ಒಳ–ಭೇದ, ಗುಂಪು, ಪಂಗಡಗಳು, ನೀಗ್ರೋಗಳು ಒಟ್ಟಾಗಿ ಮಾಡಿದ ಒಂದೂ ಸಂಘಟನೆಯುಳ್ಳ ವಿಧಾಯಕ ಸಂಸ್ಥೆಯಿಲ್ಲ, ಕೆಲವು ಪಂಗಡಗಳಂತೂ ಉಗ್ರ ವೈರಿಗಳಂತೆ ಒಂದನ್ನೊಂದು ಕಂಡರೆ ಕೆಂಡ ಕಾರುತ್ತವೆ. ಈ ವಿರೋಧಿಗಳಲ್ಲಿ ಆಗಾಗ ಚಕಮಕಿ ನಡೆದು ದೊಂಬಿ, ಕೊಲೆಗಳು ಆಗುವುದುಂಟು.

ಶಿಕಾಗೋದಲ್ಲಿ ಕರಿಯ ಮುಸಲ್ಮಾನರ (black muslims) ಪಂಗಡವೊಂದು ಭರದಿಂದ ಬೆಳೆಯುತ್ತಿದೆ. ಸಾವಿರಾರು ನಿಗ್ರೋಗಳು ಇದರ ಸದಸ್ಯರಿದ್ದಾರೆ. ಜಗತ್ತಿನ ಭಾರಿ–ತೂಕ–ಚಾಂಪಿಯನ್ (heavy-weight-champion) ಕೆಸಿಯಸ್ ಕ್ಲೇ (Cassius Clay) ಈ ಸಂಸ್ಥೆಯ ಪ್ರಮುಖ ಸದಸ್ಯ. ಇತ್ತೀಚೆಗೆ ಇಸ್ಲಾಂ ಧರ್ಮ ಸ್ವೀಕರಿಸಿ ಮಕ್ಕಾ, ಮದೀನಾಗಳಿಗೆ ಹೋಗಿ ಬಂದಿದ್ದಾನೆ. ಈಗವನ ಹೊಸ ಹೆಸರು ಮಹಮ್ಮದ ಎಂದಿದೆ. ಯಾರಾದರೂ ಅವನನ್ನು ಮರೆತು ಹಿಂದಿನ ಹೆಸರಿನಿಂದ ಕರೆದರೆ ಕೆಂಡ ಕಾರುತ್ತಾನೆ. ಇದೇ ಜಟ್ಟಿ ಹಿಂದೆ ಸೈನ್ಯ ಸೇರಲು ಹೋದಾಗ, ಮಾನಸಿಕ ಬೆಳವಣಿಗೆ (I.Q) ಕಡಿಮೆಯಿದೆಯೆಂದು ಸೇರಿಸಿಕೊಳ್ಳಲಿಲ್ಲವಂತೆ! ಇದು ನಿಜವಿರಬಹುದೆಂದು ಆತನ ವರ್ತನೆ ನೋಡಿದ, ಕೇಳಿದ ಯಾರೂ ನಂಬುವಂತಿದೆ. ಆತನಲ್ಲಿ ಕ್ರೀಡಾಪಟುವಿನ ವೃತ್ತಿ (sportsman spirit) ಎಳ್ಳಷ್ಟೂ ಇಲ್ಲ ತನ್ನ ಪ್ರತಿಸ್ಪರ್ಧಿಗಳನ್ನು ಕರಡಿ, ಕತ್ತೆ, ನಾಯಿ, ಕೋತಿ ಎಂದು ಸಂಬೋಧಿಸುತ್ತಾನೆ. ತನ್ನ ಶಕ್ತಿಯಲ್ಲಿ ಅಪರಿಮಿತ ವಿಶ್ವಾಸ ಆತನಿಗೆ ತನ್ನ ಬಗ್ಗೆ ತಾನೇ ಕವಿತೆಗಳನ್ನು ಕಟ್ಟಿ ಹಾಡುತ್ತಿರುತ್ತಾನೆ. ಅಲ್ಲಾನ ಕೃಪೆ ತನ್ನ ಮೇಲಿರುವದರಿಂದ ತನಗೆಂದೂ ಸೋಲು ಬಾರದು ಎಂಬ ದೃಢವಾದ ನಂಬಿಕೆ ಈತನದು.

ಈ ಪಂಗಡಕ್ಕೂ ನ್ಯೂಯಾರ್ಕಿನ ಇನ್ನೊಂದು ದೇವರ ಮಕ್ಕಳ ಪಂಗಡಕ್ಕೂ ಹತ್ತಿದರೆ ಹರಿಯದ ದ್ವೇಷ. ಈ ಎರಡನೇ ಪಂಗಡದವನೊಬ್ಬನು ಶಿಕಾಗೋ ಪಂಗಡದ ಒಬ್ಬನ ಕೊಲೆ ಮಾಡಿದನಂತೆ. ಸರಿ, ಶಿಕಾಗೋದಲ್ಲಿ ನಡೆಯಲಿದ್ದ ಮುಸ್ಲಿಂ ವಾರ್ಷಿಕ ಧರ್ಮಸಮ್ಮೇಳನಕ್ಕೆ ಮುಯ್ಯಿ ತೀರಿಸಿಕೊಳ್ಳಲು ಸಶಸ್ತ್ರರಾಗಿ ಈ ಜನ ಧಾವಿಸಿದರು. ಕರಿಯ ಮುಸಲ್ಮಾನರ ನಾಯಕರನ್ನು ಸಂರಕ್ಷಿಬೇಕಾದರೆ ಅಂಗರಕ್ಷಕರ ಪಡೆಯನ್ನೇ ಅವರ ಸುತ್ತಲೂ ಕೆಲ ದಿನ ಪಹರೆಗೆ ಇಡಬೇಕಾಯಿತು. ಅಮೇರಿಕೆಯ ವರ್ತಮಾನಪತ್ರಗಳು ಇಂತಹ ಘಟನೆಯನ್ನು ರೋಮಾಂಚಕಾರವಾಗಿ ವರ್ಣಿಸುತ್ತವೆ.

ಕ್ರೈಸ್ತ ನಿಗ್ರೋಗಳಲ್ಲೂ ಹತ್ತಾರು ಉಪಪಂಗಡಗಳಿವೆ. ಮೈಬಣ್ಣದ ಮೇಲೂ ಅನೇಕ ಗುಂಪುಗಳಿವೆ. (ಶ್ವೇತ-ನಿಗ್ರೋ-ಮಿಶ್ರ-ಸಂತತಿ ಅನೇಕ ಬಣ್ಣ, ಆಕಾರ, ರೂಪಗಳಿಂದ ಕೂಡಿದೆ!) ಕೆಲವರು ಕಾಣಲು ಶ್ವೇತವರ್ಣಿಯರಂತೇ ಇರುತ್ತಾರೆ. ಆದರೆ ಅವರ ಮಕ್ಕಳ ಮೈಯ ಬಣ್ಣವು ನಾಲ್ಕು ವಿಧದಿಂದ ಕೂಡಿರಬಹುದು. (ಬಿಳಿ, ನಸುಗೆಂಪು, ಕಂದು, ಕಪ್ಪು) ಮೈಬಣ್ಣ ಬಿಳಿಯರಿದ್ದ ನಿಗ್ರೋಗಳು ಕರಿಯ ನಿಗ್ರೋಗಳನ್ನು ಕೀಳೆಂದು ತಿಳಿಯುತ್ತಾರೆ. ಒಮ್ಮೊಮ್ಮೆ ಮೈಬಣ್ಣ ಅಚ್ಚ ಬಿಳಿಯದಿದ್ದ ಮಗುವಿಗೆ ಗುಂಗುರುಗೂದಲು ಬಂದು ಅದರ ಪೂರ್ವಜರ ಪರಿಚಯ ಚೆನ್ನಾಗಿ ಆಗಿಬಿಡುತ್ತದೆ. ಇಂದಿನ ಕೃತ್ರಿಮ ಗುಂಗುರು ಕೂದಲಿನ ಯುಗದಲ್ಲಿ ಇದೂ ಕೂಡ ಕ್ಷಮ್ಯವಾಗಬಹುದು. ಆತ ಏನೂ ಆತಂಕವಿಲ್ಲದೇ ಬಿಳಿಯನೆನ್ನಿಸಿಕೊಳ್ಳಬಹುದು. ಆದರೆ ಅವನಿಗೆ ಕರಿಯ ಮಗುವಾದಾಗ ಮಾತ್ರ ಹೆಚ್ಚಿನ ತೊಂದರೆಗಿಟ್ಟುಕೊಳ್ಳುತ್ತದೆ.